ದೇವನಹಳ್ಳಿ(ಬೆಂ.ಗ್ರಾಮಾಂತರ): ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯಿಂದ ಶ್ರೀನಗರದಲ್ಲಿ ಸಿಲುಕಿದ್ದ ಕನ್ನಡಿಗರು ಇಂದು ವಿಶೇಷ ವಿಮಾನದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಚಿವ ಸಂತೋಷ್ ಲಾಡ್ ಅವರೊಂದಿಗೆ ಆಗಮಿಸಿದರು.
"177 ಕನ್ನಡಿಗರನ್ನು ಸುರಕ್ಷಿತವಾಗಿ ಕರೆತಂದಿದ್ದೇವೆ. ಇನ್ನೂ ಕೆಲವರು ಜಮ್ಮು ಮತ್ತು ಕತ್ರಾದಲ್ಲಿದ್ದಾರೆ. ಅವರಿಗೆ ಮಾರ್ಗದರ್ಶನ ನೀಡಲಾಗಿದೆ. ಅಲ್ಲಿನ ಸ್ಥಳೀಯ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ನಿಯಮಗಳನ್ನು ಪಾಲಿಸಿಕೊಂಡು ಸುರಕ್ಷಿತವಾಗಿ ಬರುವಂತೆ ತಿಳಿಸಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀಡಿದ ಸೂಚನೆಯಂತೆ ಉಗ್ರರ ದಾಳಿಯಿಂದ ಶ್ರೀನಗರದಲ್ಲಿ ಸಿಲುಕಿದ್ದ ಕನ್ನಡಿಗರನ್ನು ಕರೆತರುವುದು ನಮ್ಮ ಮೊದಲ ಆದ್ಯತೆಯಾಗಿತ್ತು. ಆ ಕೆಲಸವನ್ನು ಯಶಸ್ವಿಯಾಗಿ ಮಾಡಿದ್ದೇವೆ" ಎಂದರು.
ಬಳಿಕ ಅಲ್ಲಿನ ಪರಿಸ್ಥಿತಿಯ ಬಗ್ಗೆ ಪ್ರತಿಕ್ರಿಯಿಸಿ, "ಅಲ್ಲಿನ ಪರಿಸ್ಥಿತಿಯನ್ನು ಮಾತುಗಳಲ್ಲಿ ಹೇಳಲು ಆಗುವುದಿಲ್ಲ. ನಾನು ನೇರವಾಗಿ ನೋಡದೇ ಇದ್ದರೂ ತಿಳಿದುಕೊಂಡಿದ್ದೇನೆ. ಉಗ್ರರ ದಾಳಿಗೆ ಸಿಲುಕಿದ ಮಹಿಳೆಯೊಬ್ಬರು, "ನನ್ನನ್ನೂ ಗುಂಡಿಕ್ಕಿ ಕೊಲ್ಲಿ" ಎಂದು ಹೇಳಿದರು. ಇಂತಹ ಧೈರ್ಯವನ್ನು ನಮ್ಮ ದೇಶದ ಹೆಣ್ಣು ಮಕ್ಕಳಲ್ಲಿ ಮಾತ್ರ ನೋಡಲು ಸಾಧ್ಯವಿದೆ" ಎಂದ ತಿಳಿಸಿದರು.
"ಕೇಂದ್ರ ಸರ್ಕಾರದ ಭದ್ರತಾ ವೈಫಲ್ಯದ ಬಗ್ಗೆ ಈ ಹೇಳುವ ಸಮಯ ಇದಲ್ಲ. ಇಂದು 177 ಜನರನ್ನು ಕರೆತರಲಾಗಿದೆ. ಸಂಜೆ 13 ಜನರ ತಂಡ ತಾಯ್ನಾಡಿಗೆ ಬರಲಿದೆ. ಇನ್ನುಳಿದ ಟಿಕೆಟ್ ಬುಕಿಂಗ್ ಆಗಿದ್ದು, ಹಂತಹಂತವಾಗಿ ಬರಲಿದ್ದಾರೆ" ಎಂದು ಹೇಳಿದರು.
ಇದನ್ನೂ ಓದಿ: ಶಿವಮೊಗ್ಗ: ಉಗ್ರರ ಗುಂಡಿಗೆ ಪ್ರಾಣತೆತ್ತ ಉದ್ಯಮಿ ಮಂಜುನಾಥ ರಾವ್ ಅಂತ್ಯಕ್ರಿಯೆ