ಮೈಸೂರು: ರಾಜ್ಯದ ಕರಾವಳಿ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶವಾದ ಕೊಡಗು ಭಾಗದಲ್ಲೂ ಜೋರು ಮಳೆಯಾಗುತ್ತಿದೆ. ಮೈಸೂರಿನ ಸಾಲಿಗ್ರಾಮ ತಾಲೂಕಿನ ಧನುಷ್ಕೋಟಿಯಲ್ಲಿ ಕಾವೇರಿ ರುದ್ರ ರಮಣೀಯವಾಗಿ ಭೋರ್ಗರೆಯುತ್ತಿದೆ.
ಸತತ ಮಳೆಯಿಂದ ಕಾವೇರಿ ನದಿ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆಯಾಗಿದ್ದು, ಧುಮ್ಮಿಕ್ಕುತ್ತಿರುವ ಧನುಷ್ಕೋಟಿ ಜಲಪಾತ ನೋಡಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ರಾಜ್ಯದ ಪ್ರಮುಖ ಜಲಪಾತಗಳಲ್ಲಿ ಧನುಷ್ಕೋಟಿ ಜಲಪಾತವೂ ಒಂದು.
27 ಮೀಟರ್ ಎತ್ತರದಿಂದ ಧುಮುಕುವ ಕಾವೇರಿ ನದಿಯ ಜಲರಾಶಿ ಕಣ್ತುಂಬಿಕೊಳ್ಳಲೆಂದೇ ಪ್ರತೀ ವರ್ಷ ಪ್ರವಾಸಿಗರು ಇಲ್ಲಿ ಲಗ್ಗೆ ಇಡುತ್ತಾರೆ. ಈ ವರ್ಷವೂ ಮಳೆಯಿಂದ ಜಲಪಾತ ಮೈದುಂಬಿ ಹರಿಯುತ್ತಿದ್ದು, ಪ್ರವಾಸಿಗರು ಪುಳಕಗೊಂಡಿದ್ದಾರೆ.
ಜಲಧಾರೆ ನೀರು ಉಕ್ಕಿ ಹರಿಯುತ್ತಿದ್ದು, ಮಹಿಳೆಯರು ಮತ್ತು ಮಕ್ಕಳಾದಿಯಾಗಿ ಎಲ್ಲರೂ ನದಿ ದಂಡೆ ಮೇಲೆ ನಿಂತು ಪ್ರಕೃತಿ ಸೌಂದರ್ಯ ಸವಿಯುತ್ತಿದ್ದಾರೆ. ಜಲಪಾತದ ಸನಿಹದಲ್ಲಿ ನಿಂತು ಸೆಲ್ಫಿ ತೆಗೆದುಕೊಂಡು ಯುವಕ, ಯುವತಿಯರು ಖುಷಿಪಡುತ್ತಿದ್ದಾರೆ.
ಇದನ್ನೂ ಓದಿ: ಜೋಗ ಜಲಪಾತದಲ್ಲಿ ಭರದಿಂದ ಸಾಗುತ್ತಿರುವ ಅಭಿವೃದ್ಧಿ ಕಾರ್ಯ: ಯಾವೆಲ್ಲಾ ಕಾಮಗಾರಿಗಳು ನಡೆದಿವೆ ಗೊತ್ತಾ? - JOG FALLS