ಕಾಪು(ಉಡುಪಿ): ಜನಪ್ರಿಯ ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ ಅವರು ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಹೊಸ ಮಾರಿಗುಡಿಗೆ ಸೋಮವಾರ ಭೇಟಿ ನೀಡಿದ್ದರು. ನೂತನವಾಗಿ ನಿರ್ಮಾಣಗೊಂಡಿರುವ ಮಾರಿಗುಡಿ ದೇಗುಲ ದರ್ಶನ ಮಾಡಿ, ಪೂಜೆ ಸಲ್ಲಿಸಿದರು.
ದೇವಾಲಯದ ವತಿಯಿಂದ ರಾಜ್ ಬಿ. ಶೆಟ್ಟಿಯವರನ್ನು ಗೌರವಿಸಲಾಯಿತು. ಸದ್ಯ ತಮ್ಮ ಲಾಫಿಂಗ್ ಬುದ್ಧ ಸಂಸ್ಥೆಯಿಂದ ನಿರ್ಮಾಣಗೊಂಡಿರುವ ಸು ಫ್ರಂ ಸೋ ಸಿನಿಮಾ ಬಿಡುಗಡೆಯ ನಿರೀಕ್ಷೆಯಲ್ಲಿರುವ ರಾಜ್ ಶೆಟ್ಟಿ, ಸಿನಿಮಾ ಪ್ರಚಾರ ಸಲುವಾಗಿ ಕರಾವಳಿ ಪ್ರವಾಸದಲ್ಲಿದ್ದಾರೆ.
ಅಭಿಮಾನಿಗಳೇ ಸಿನಿಮಾ ನೋಡಿ ರಿವ್ಯೂ ನೀಡುವಂತೆ, ಚಿತ್ರ ಪ್ರದರ್ಶನಕ್ಕೆ ಹೊಸ ಆಯಾಮ ನೀಡಿರುವ ರಾಜ್ ಬಿ. ಶೆಟ್ಟಿ ಸದ್ಯ ಕನ್ನಡ ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ.
ಇತ್ತೀಚೆಗಷ್ಟೇ ಕಾಪು ಹೊಸ ಮಾರಿಗುಡಿ ಆಕರ್ಷಕವಾಗಿ ನವೀಕರಣಗೊಂಡಿತ್ತು. ಕೋಟ್ಯಂತರ ರೂ. ವೆಚ್ಚದಲ್ಲಿ ಹೊಸ ಮಾರಿಗುಡಿಯನ್ನು ಭಕ್ತರ ದೇಣಿಗೆಯ ಸಹಕಾರದಿಂದ ನಿರ್ಮಿಸಲಾಗಿದೆ. ಮಾರ್ಚ್ನಲ್ಲಿ ಹೊಸಮಾರಿಗುಡಿ ನವೀಕರಣಗೊಂಡು ಲೋಕಾರ್ಪಣೆಗೊಂಡ ಬಳಿಕ ಇಲ್ಲಿಗೆ ಸೆಲೆಬ್ರಿಟಿಗಳ ದಂಡೇ ಹರಿದುಬರುತ್ತಿದೆ.
ಸ್ಯಾಂಡಲ್ವುಡ್ ಮಾತ್ರವಲ್ಲದೆ ಬಾಲಿವುಡ್, ಟಾಲಿವುಡ್ನ ನಟ ನಟಿಯರೂ ಇಲ್ಲಿಗೆ ಅಗಮಿಸಿ ದೇವಿದರ್ಶನ ಪಡೆಯುತ್ತಿದ್ದಾರೆ. ಇತ್ತೀಚೆಗೆ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಕುಟುಂಬ ಸಮೇತ ಮಾರಿಗುಡಿಗೆ ಭೇಟಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಅಂದಹಾಗೆ, ಸೂರ್ಯಕುಮಾರ್ ಯಾದವ್ ಕಾಪುವಿನ ಅಳಿಯ ಎಂಬುದು ಗಮನಾರ್ಹ ಸಂಗತಿ.
ಇದನ್ನೂ ಓದಿ: ಉಡುಪಿಯಲ್ಲಿ ಕ್ರಿಕೆಟರ್ ಸೂರ್ಯಕುಮಾರ್ ಯಾದವ್ ದಂಪತಿ; ದೈವಸ್ಥಾನದ ದರ್ಶನ- ವಿಡಿಯೋ - Suryakumar Yadav Visits Udupi